Archive for October, 2006

Post

ರೂಪಕದ ಅರ್ಥ

In ಆಲ್_ಹಾಲ್ ನ ಕಥೆಗಳು on October 10, 2006 by ಶೂನ್ಯ ಸಂಪಾದಕ

ಟಾ_ರಸ ರೂಪಕಗಳಲ್ಲಿ ಉತ್ತರ ಕೊಡುವುದರಲ್ಲಿ ಪ್ರವೀಣ. ಅವನಿಗೆ ಎದುರಾಗುವ ಎಲ್ಲಾ ಪ್ರಶ್ನೆಗಳನ್ನೂ ಅವು ವಿಶಿಷ್ಟವಾಗಿ ಗ್ರಹಿಸಿ ರೂಪಕಗಳಲ್ಲಿ ಉತ್ತರಿಸುತ್ತಿದ್ದುದರಿಂದ ಅನೇಕರಿಗೆ ಅವು ಅರ್ಥವಾಗುತ್ತಿರಲಿಲ್ಲ. ವರ್ತಮಾನದಲ್ಲೂ ಟಾ_ರಸನ ಕತೆಗಳನ್ನು ಕೇಳುವ, ಓದುವ ಅನೇಕರು ಕತೆಗಳು ಅರ್ಥವಾಗಲಿಲ್ಲ ಎಂದು ತಿಣುಕಾಡುತ್ತಾರೆ.

ಟಾ_ರಸನ ಗುರುಗಳಾದ ಆಲ್‌_ಹಾಲ್‌ರ ಶಿಷ್ಯರಿಗೂ ಇದೇ ಸಮಸ್ಯೆ ಕಾಡಿ ಅವರು ಗುರುಗಳ ಬಳಿಗೆ ಹೋದರು. `ತಾವೇನೋ ಟಾ_ರಸನ ಉತ್ತರಗಳು, ಸಾಮಿತಿಗಳು, ದೃಷ್ಟಾಂತಗಳನ್ನು ಹೊಗಳುತ್ತೀರಿ. ಆತ ಯಾವತ್ತೂ ಅವುಗಳ ಅರ್ಥವನ್ನು ವಿವರಿಸಲೇ ಇಲ್ಲ’ ಎಂದರು.

ಇದನ್ನು ಕೇಳಿ ನಕ್ಕ ಆಲ್‌_ಹಾಲ್‌ `ನಿಮಗೆ ತಿನ್ನಲೆಂದು ಹಣ್ಣನ್ನು ಕೊಡುವವರು ಅದನ್ನು ಅಗಿದು ಕೊಟ್ಟರೆ ನಿಮಗೇನನ್ನಿಸುತ್ತದೆ?’ ಎಂದು ಪ್ರಶ್ನಿಸಿದರು.

Post

ಬದುಕಿನ ಭವಿಷ್ಯ

In ಟಾ_ರಸನ ಕಥೆಗಳು on October 9, 2006 by ಶೂನ್ಯ ಸಂಪಾದಕ

ಟಾ_ರಸ ತಾಳೆ ಮರದ ಕೆಳಗೆ ಹೆಂಡದ ಬುರುಡೆಯೊಂದಿಗೆ ಧ್ಯಾನಕ್ಕೆ ಕುಳಿತ ಹೊತ್ತಿನಲ್ಲಿ ಅವನು ಭವಿಷ್ಯ ನುಡಿಯುತ್ತಾನೆ ಎಂಬ ನಂಬಿಕೆ ಅನೇಕರಿಗೆ ಇತ್ತು. ಧ್ಯಾನಸ್ಥ ಸ್ಥಿತಿಯಲ್ಲಿ ಟಾ_ರಸ ಹೇಳುತ್ತಿದ್ದ ಕೆಲವು ಮಾತುಗಳನ್ನು ಹಲವರು ಭವಿಷ್ಯದ ಸೂಚನೆಗಳಾಗಿ ಪರಿಗಣಿಸುತ್ತಿದ್ದರು. ಇದನ್ನು ಅರಿತವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಟಾ_ರಸನನ್ನು ಧ್ಯಾನದ ಹೊತ್ತಿನಲ್ಲಿ ಭೇಟಿಯಾಗುತ್ತಿದ್ದರು.

ಹೀಗೆ ಬಂದ ಒಬ್ಬಾತ ತಾನೆಷ್ಟು ಶ್ರೀಮಂತ, ತಾನೆಷ್ಟು ತೀರ್ಥಕ್ಷೇತ್ರಗಳಿಗೆ ಶಾಂತಿ ಹುಡುಕಿಕೊಂಡು ಅಲೆದಿದ್ದೇನೆ ಎಂದೆಲ್ಲಾ ಹೇಳಿಕೊಂಡು `ಆದರೂ ನನಗೆ ಶಾಂತಿ ದೊರೆತಿಲ್ಲ. ಆದುದರಿಂದ ನಾನು ಹೇಗೆ ಬದುಕಬೇಕು. ನನ್ನ ಮುಂದಿನ ಬದುಕು ಹೇಗಿರುತ್ತದೆ?’ ಎಂದು ಪ್ರಶ್ನಿಸಿದ.

ಟಾ_ರಸ ಉತ್ತರವೂ ಮಿಂಚಿನ ವೇಗದಲ್ಲಿ ಬಂತು: `ನಿನ್ನ ಬದುಕು ಬಹಳ ಕಷ್ಟವಿದೆ. ಹಿಂದೆ ಯಾರೂ ನಿನ್ನ ಬದುಕನ್ನು ಬಾಳಿ ನೋಡಿರಲಿಲ್ಲ!’

Post

ಸ್ವರ್ಗ-ನರಕ

In ಟಾ_ರಸನ ಕಥೆಗಳು on October 7, 2006 by ಶೂನ್ಯ ಸಂಪಾದಕ

ಟಾ_ರಸ ಧ್ಯಾನಸ್ಥನಾದಾಗ ದೇವರ ಜತೆ ಸಂಭಾಷಿಸುತ್ತಿರುತ್ತಾನೆ ಎಂಬುದು ಜನಪ್ರಿಯ ನಂಬಿಕೆ. ಕೆಲವರು ಹೇಳುವಂತೆ ಅವನು ಸ್ವರ್ಗ-ನರಕಗಳ ದರ್ಶನವನ್ನೂ ಮಾಡಿಕೊಂಡು ಹಿಂದಿರುಗುತ್ತಿದ್ದನಂತೆ.  ಈ ಕಾರಣದಿಂದಾಗಿಯೇ ಧ್ಯಾನದಿಂದ ಎದ್ದ ತಕ್ಷಣ ಅವನಾಡುವ ಮಾತು ಈ ಲೋಕದ್ದಲ್ಲ ಎಂಬಂತೆ ಇರುತ್ತವೆ ಎಂದು ಕೆಲವರು ಹೇಳುತ್ತಾರೆ.

ಟಾ_ರಸ ಒಂದು ದಿನ ಎಂದಿನಂತೆ ಈಚಲ ಮರದ ಕೆಳಗೆ  ಕುಳಿತಿದ್ದಾಗ ಒಬ್ಬಾತ ಬಂದು ಸ್ವರ್ಗ-ನರಕಗಳ ಕುರಿತು ಮಾತನಾಡಲು ತೊಡಗಿದ. ಟಾ_ರಸ `ಒಂದು ನಿಮಿಷ’ ಎಂದು ಹೇಳಿ ಸಮಾಧಿಗೆ ತೆರಳಿದ.

ಒಂದೆರಡು ನಿಮಿಷಗಳ ನಂತರ ಕಣ್ಣು ತೆರೆದಾಗ ಎದುರಿದ್ದಾತ `ನರಕದ ಹಿಂಸೆಯ ಬಗೆಗಿನ ತಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದ.

ಟಾ_ರಸ ಉತ್ತರಿಸಿದ `ನಾನು ಈಗಷ್ಟೇ ನರಕದ ದರ್ಶನ ಮಾಡಿ ಬಂದೆ. ನರಕದ ಬಾಗಿಲು ತೆರೆದೇ ಇದೆ. ಆದರೆ ಯಾರೊಬ್ಬ ನರಕವಾಸಿಯೂ ಹೊರಗೆ ಬರುವ ಧೈರ್ಯ ಮಾಡುತ್ತಿಲ್ಲ!’

Post

ಸಾಧನೆ, ಸಾಧಕ

In ಟಾ_ರಸನ ಕಥೆಗಳು on October 7, 2006 by ಶೂನ್ಯ ಸಂಪಾದಕ

ಟಾ_ರಸ  ಒಂದು ದಿನ ತೊರೆಯ ದಂಡೆಯ ಮೇಲಿದ್ದ ತಾಳೆ ಮರದ ಕೆಳಗೆ ತನ್ನ ಹೆಂಡದ ಬುರುಡೆಯೊಂದಿಗೆ ಧ್ಯಾನಾಸಕ್ತನಾಗಿದ್ದ ಹೊತ್ತಿನಲ್ಲಿ ಆಗಂತುಕನೊಬ್ಬನ ಆಗಮನವಾಯಿತು. ಧ್ಯಾನಸ್ತ ಸ್ಥಿತಿಯಲ್ಲಿ ಹೆಂಡ ಸೇವನೆಯನ್ನು ಮುಂದುವರಿಸಿದ ಟಾ_ರಸ ಬಂದ ಆಗಂತುಕನ ಕಡೆ ಗಮನವನ್ನೇ ಹರಿಸಲಿಲ್ಲ.

ಆದರೆ ಆಗಂತುಕ ಬಿಡಲಿಲ್ಲ. ಟಾ_ರಸನ ಎದುರು ಕುಳಿತು ತಾನೊಬ್ಬ ಸಾಧಕ ಎಂದು ಪರಿಚಯಿಸಿಕೊಂಡು `ತಮಗೆ `ಟೌತ್ವ’ ಪ್ರಾಪ್ತಿಯಾಗಿರುವುದನ್ನು ಯಾರೋ ತಿಳಿಸಿದರು. ನಿಮ್ಮನ್ನು ಕಂಡು ನನ್ನ ಸಾಧನೆಗೆ ಮಾರ್ಗದರ್ಶನ ಪಡೆಯೋಣವೆಂದು ಬಂದಿದ್ದೇನೆ. ದಯವಿಟ್ಟು ನನ್ನ ಕೋರಿಕೆಯನ್ನು ಮನ್ನಿಸಬೇಕು’ ಎಂದು ವಿನಂತಿಸಿದ.

ಟಾ_ರಸ ಹೇಳಿದ: `ನಿನ್ನ ಸಾಧನೆಗಳೇನು?’

ಆಗಂತುಕ: `ಈ ಕಾಣಿಸುತ್ತಿರುವ ತೊರೆಯ ನೀರಿನ ಮೇಲೆ ನಡೆದುಕೊಂಡು ಆಚೆ ದಡಕ್ಕೆ ಹೋಗಬಲ್ಲೆ’

ಟಾ_ರಸ: `ಇದನ್ನು ಹೇಗೆ ಕಲಿತೆ?’

ಆಗಂತುಕ: `ಹತ್ತು ವರ್ಷದ ಸತತ ಸಾಧನೆಯಿಂದ’

ಟಾ_ರಸ: ಮೊಳಕಾಲುದ್ದ ನೀರಿರುವ ಈ ತೊರೆಯನ್ನು ದಾಟುವುದನ್ನು ಕಲಿಯಲು ಹತ್ತು ವರ್ಷ ಬೇಕಾಯಿತೇ?

Post

ಟಾ_ರಸ ಹೇಳಿದ ಕತೆ

In ಟಾ_ರಸನ ಕಥೆಗಳು on October 6, 2006 by ಶೂನ್ಯ ಸಂಪಾದಕ

ಇದು ಟಾ_ರಸ ಹೇಳಿದ ಆಲ್‌_ಹಾಲ್‌ನ ಕತೆ. ಒಂದು ದಿನ ಮಧ್ಯಾಹ್ನ ಟಾ_ರಸ ಊಟ ಮುಗಿಸಿ ಆಶ್ರಮದ ಮರದ ನೆರಳಲ್ಲಿ ಕುಳಿತಿದ್ದಾಗ ಅಲ್ಲಿಗೆ ಗುರು ಆಲ್‌_ಹಾಲ್‌ನ ಆಗಮನವಾಯಿತು. ಇಬ್ಬರೂ ಮೌನ ಸಂಭಾಷಣೆಯಲ್ಲಿ ತೊಡಗಿದ್ದಾಗ ಆಗಂತುಕನೊಬ್ಬ ಬಂದ. ಆತ ಹತ್ತಿರ ಬಂದು ಪರಿಚಯಿಸಿಕೊಂಡು ಆಲ್‌_ಹಾಲ್‌ನಲ್ಲಿ ಕೇಳಿದ. `ತಾವು ಮಹಾಜ್ಞಾನಿಗಳೆಂದು ತಿಳಿದಿದ್ದೇನೆ. ನನಗೇನಾದರೂ ಉಪದೇಶ ನೀಡಬಹುದೇ?’

ಆಲ್‌_ಹಾಲ್‌ ಮೌನ ಮುರಿದು ಮಾತನಾಡತೊಡಗಿದ:  `ನಿನ್ನ ಊಟವಾಯಿತೇ?’

`ಆಯಿತು ಮಹಾಸ್ವಾಮಿ’

`ಸರಿ ಹಾಗಾದರೆ ಹೋಗಿ ನಿನ್ನ ತಟ್ಟೆ ತೊಳೆದಿಡು’

Post

ಅತಿ ದೊಡ್ಡ ಸುಳ್ಳು

In ಟಾ_ರಸನ ಕಥೆಗಳು on October 6, 2006 by ಶೂನ್ಯ ಸಂಪಾದಕ

ಟಾ_ರಸ  ಬಾಲಕನಾಗಿದ್ದಾಗ ನಡೆದ ಘಟನೆ ಇದು. ಒಂದು ದಿನ ಟಾ_ರಸ ಮತ್ತು ಅವನ ಗೆಳೆಯರು ಆಟವಾಡುತ್ತಿದ್ದಾಗ ಒಂದು ನಾಯಿ ಮರಿ ಬಂತು. ಈ ನಾಯಿ ಮರಿಯನ್ನು ಅಲ್ಲಿದ್ದ ಎಲ್ಲ ಬಾಲಕರೂ ಇಷ್ಟಪಟ್ಟರು.

ಪ್ರತಿಯೊಬ್ಬರೂ ನಾಯಿಯನ್ನು ಸಾಕಲು ತಾನೆಷ್ಟು ಸಮರ್ಥ ಎಂದು ವಾದಿಸ ತೊಡಗಿದ್ದರಿಂದ ಆಟ ಹೋಗಿ ಹೊಡೆದಾಟ ಆರಂಭವಾಯಿತು. ಆದರೂ ಸಮಸ್ಯೆ ಬಗೆ ಹರಿಯಲಿಲ್ಲ. ಕೊನೆಗೆ ಯಾರು ಅತ್ಯಂತ ದೊಡ್ಡ ಸುಳ್ಳು ಹೇಳುತ್ತಾನೋ ಅವನಿಗೆ ನಾಯಿ ಎಂದು ತೀರ್ಮಾನಿಸಲಾಯಿತು.

ನಾಯಿಯನ್ನು ಮಧ್ಯೆ ನಿಲ್ಲಿಸಿಕೊಂಡು ಒಬ್ಬೊಬ್ಬರೇ ಸುಳ್ಳುಗಳನ್ನು ಹೇಳಲು ತೊಡಗಿದರು. ಈ ಹೊತ್ತಿಗೆ ಸರಿಯಾಗಿ ಸನ್ಯಾಸಿಯಂತೆ ಕಾಣುವ ವೃದ್ಧರೊಬ್ಬರ ಆಗಮನವಾಯಿತು. ಮಕ್ಕಳು ನಾಯಿಯೊಂದರ ಸುತ್ತ ನಿಂತು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಅವರನ್ನು ಕಾಡಿ ಮಕ್ಕಳನ್ನು ವಿಚಾರಿಸಿದರು. ಅವರು ಸುಳ್ಳು ಹೇಳುವ ಸ್ಪರ್ಧೆ ನಡೆಯುತ್ತಿದೆ ಎಂದು ಅವರ ವಿವರವನ್ನು ತಿಳಿಸಿದರು.

ಇದನ್ನು ಕೇಳಿ ಸಿಟ್ಟು ಮಾಡಿಕೊಂಡ ಆ ವೃದ್ಧ ಸನ್ಯಾಸಿ ಸುಳ್ಳು ಹೇಳುವುದು ಎಷ್ಟು ಕೆಟ್ಟದು ಎಂಬ ಭಾಷಣ ಬಿಗಿಯುತ್ತಾ `ನಾನು ನಿಮ್ಮಂತೆ ಚಿಕ್ಕವನಾಗಿದ್ದಾಗ ಸುಳ್ಳು ಹೇಳುತ್ತಿರಲಿಲ್ಲ….’  ಎಂದು ಹೇಳಿದ ತಕ್ಷಣ ಬಾಲಕ ಟಾ_ರಸ ದೊಡ್ಡ ನಿಟ್ಟುಸಿರಿನೊಂದಿಗೆ ಮಧ್ಯ ಪ್ರವೇಶಿಸಿ `ಸರಿ ನಾಯಿ ನಿಮಗೇ ದೊರೆಯಿತು’ ಎಂದು ಘೋಷಿಸಿದ.

Post

ಯಾವ ಇತರರು?

In ಆಲ್_ಹಾಲ್ ನ ಕಥೆಗಳು on October 5, 2006 by ಶೂನ್ಯ ಸಂಪಾದಕ

ಆಲ್‌_ಹಾಲ್‌ ಅವರ ಬಳಿಗೆ ಉಪದೇಶ ನಿರೀಕ್ಷಿಸಿ ಹಲವರು ಬರುತ್ತಿದ್ದರು. ಇವರಲ್ಲಿ ಎಲ್ಲ ವರ್ಗದ ಜನರೂ ಇದ್ದರು. ಒಮ್ಮೆ ದೂರದ ಓಯಸಿಸ್‌ನಿಂದ ಒಬ್ಬ ಶ್ರೀಮಂತ ಬಂದ. ಆಶ್ರಮದಲ್ಲಿ  ಆತಿಥ್ಯ ಸ್ವೀಕರಿಸಿದ ನಂತರ ಆಲ್‌_ಹಾಲ್‌ರ ಬಳಿಗೆ ಹೋಗಿ ತನ್ನನ್ನು ಕಾಡುತ್ತಿರುವ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟು ಅನುಗ್ರಹಿಸಬೇಕು ಎಂದು ಬೇಡಿಕೊಂಡ.

ಆಲ್‌_ಹಾಲ್‌ ಪ್ರಶ್ನೆ ಏನೆಂದು ಕೇಳಿದರು.

ಆತ ಹೇಳಿದ: `ನನ್ನಲ್ಲಿ ಸಾಕಷ್ಟು ಧನ, ಕನಕ, ಆಸ್ತಿಯಿದೆ. ಇದನ್ನು ಇತರರಿಗೆ ಕೊಟ್ಟು ಸಹಾಯ ಮಾಡುವುದು ಹೇಗೆ?

ಆಲ್‌_ಹಾಲ್‌ ಮರುಪ್ರಶ್ನೆ ಹಾಕಿದರು: `ಯಾವ ಇತರರು?’

Post

ಮರ್ಮಶಾಸ್ತ್ರ, ನಾಡಿಶಾಸ್ತ್ರ

In ಟಾ_ರಸನ ಕಥೆಗಳು on October 4, 2006 by ಶೂನ್ಯ ಸಂಪಾದಕ

ಟಾ_ರಸ ನಾಡಿಶಾಸ್ತ್ರ, ಮರ್ಮಶಾಸ್ತ್ರಗಳನ್ನು ಅಭ್ಯಾಸ ಮಾಡುತ್ತಿದ್ದ ದಿನಗಳವು. ಒಂದು ದಿನ ಮಧ್ಯಾಹ್ನ ಬೀಡಾಡಿ ದನವೊಂದು ಗುರುಕುಲಕ್ಕೆ ಸೇರಿದ ಹೊಲಕ್ಕೆ ನುಗ್ಗಿ ಪೈರನ್ನು  ಕಬಳಿಸುತ್ತಿತ್ತು. ಇದನ್ನು ಕಂಡ ಗುರು ಆಲ್‌_ಹಾಲ್‌ರ ಪತ್ನಿ ಟಾ_ರಸನನ್ನು ಕೂಗಿ ಕರೆದು ದನವನ್ನು ಓಡಿಸಲು ಹೇಳಿದರು. ಟಾ_ರಸ ಸಣ್ಣದೊಂದು ಕಡ್ಡಿ ತೆಗೆದುಕೊಂಡು ದನವನ್ನು ಓಡಿಸಲು ಪ್ರಯತ್ನಿಸಿದ. ಅದು ಟಾ_ರಸನ ಪೆಟ್ಟುಗಳಿಗೆ ಯಾವ ಗೌರವವನ್ನೂ ಕೊಡದೇ ಪೈರು ತಿನ್ನುವ ತನ್ನ ಕಾಯಕವನ್ನು ಮುಂದುವರಿಸಿತು. ಟಾ_ರಸ ಸಣ್ಣ ಕಡ್ಡಿ ಬಳಸಿ ಎಚ್ಚರಿಕೆಯಿಂದ ಮೆಲ್ಲನೆ  ಆ ದನವನ್ನು ತಟ್ಟಿ  ಓಡಿಸುವ ಪ್ರಯತ್ನವನ್ನೂ ಮುಂದುವರಿಸಿದ.

ಇದನ್ನು ಮನೆಯೊಳಗಿನಿಂದಲೇ ನೋಡುತ್ತಿದ್ದ ಟಾ_ರಸನ ಗುರು ಪತ್ನಿಗೆ ಕೋಪ ತಡೆಯಲಾಗಲಿಲ್ಲ. ತಾವೇ ಒಂದು ದೊಡ್ಡ ದೊಣ್ಣೆಯೊಂದಿಗೆ ಬಂದು ದನಕ್ಕೆ ಎರಡು ಪೆಟ್ಟು ಕೊಟ್ಟು ಓಡಿಸಿದರು. ನಂತರ ಟಾ_ರಸನನ್ನು ಉದ್ದೇಶಿಸಿ `ಈ ಕಡ್ಡಿಯಿಂದ ತಟ್ಟಿದರೆ ಅದು ಹೋಗಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ಟಾ_ರಸ  ಸ್ವಲ್ಪ ಕೋಪದಿಂದಲೇ ಉತ್ತರಿಸಿದ ` ನೀವು ಮರ್ಮಶಾಸ್ತ್ರ ಕಲಿತಿದ್ದರೆ ನನ್ನ ಕಷ್ಟ ತಿಳಿಯುತ್ತಿತ್ತು. ನನಗೆ ಆ ದನದ ದೇಹದ ತುಂಬ ಮರ್ಮಗಳೂ ನಾಡಿಗಳೂ ಕಾಣಿಸುತ್ತಿದ್ದವು. ನನ್ನ ಪೆಟ್ಟು ಅವುಗಳಲ್ಲಿ ಒಂದಕ್ಕೆ  ತಾಗಿದ್ದರೂ ಆ ದನ ಸಾಯುತ್ತಿತ್ತು’

Post

ಭೂತ, ವರ್ತಮಾನ, ಭವಿಷ್ಯ

In ಟಾ_ರಸನ ಕಥೆಗಳು on October 4, 2006 by ಶೂನ್ಯ ಸಂಪಾದಕ

ಆಲ್‌_ಹಾಲ್‌ ಅವರ ಶಿಷ್ಯರಲ್ಲಿ ಅನೇಕರಿಗೆ ಟಾ_ರಸನಿಗೆ `ಟೌತ್ವ’ ಪ್ರಾಪ್ತಿಯಾಗಿದೆ ಎಂಬುದನ್ನು ಒಪ್ಪಿಕೊಂಡಿರಲಿಲ್ಲ. ಇದು ಗುರು ಆಲ್‌_ಹಾಲ್‌ಗೂ ತಿಳಿದಿತ್ತು. ತನ್ನ ವಿದ್ಯಾರ್ಥಿಗಳ ತಪ್ಪು ತಿಳುವಳಿಕೆಯನ್ನು ನಿವಾರಿಸಲು ನಿರ್ಧರಿಸಿದ ಅವರು ಒಂದು ದಿನ ವಿದ್ಯಾರ್ಥಿಗಳೆಲ್ಲಾ ರಾತ್ರಿಯ ಊಟಕ್ಕೆ ಕುಳಿತಾಗ ತಮ್ಮ ತಟ್ಟೆ ಹಿಡಿದುಕೊಂಡು ಅಲ್ಲಿಗೆ ಹೋಗಿ ಎಲ್ಲರಂತೆ ಬಡಿಸಿಕೊಂಡರು.

ವಿದ್ಯಾರ್ಥಿಗಳೆಲ್ಲಾ ಗುರುಗಳು ಊಟ ಆರಂಭಿಸಲಿ ಎಂದು ಕಾಯುತ್ತಿದ್ದಾಗ ಗುರುಗಳು ಒಂದು ಪ್ರಶ್ನೆ ಮುಂದಿಟ್ಟು ಇದಕ್ಕೆ ಟಾ_ರಸನ ಹೊರತು ಪಡಿಸಿ ಉಳಿದ ಯಾರು ಬೇಕಾದರೂ ಉತ್ತರಿಸಿ ಊಟ ಆರಂಭಿಸಿ ಎಂದು ತಾವು ತಿನ್ನಲು ತೊಡಗಿದರು.

ಆ ಪ್ರಶ್ನೆ ಹೀಗಿತ್ತು `ನೀವು ಊಟ ಮಾಡುವುದು ಭೂತದಲ್ಲೋ, ವರ್ತಮಾನದಲ್ಲೋ ಭವಿಷ್ಯದಲ್ಲೋ?’

ಶಿಷ್ಯರೆಲ್ಲಾ ರಾತ್ರಿಯಿಡೀ ತಲೆಕೆಡಿಸಿಕೊಂಡು ಊಟದ ತಟ್ಟೆಗಳ ಮುಂದೆ ಕುಳಿತರು. ಮರುದಿನ ಮಧ್ಯಾಹ್ನವಾದರೂ ಯಾರಿಗೂ ಉತ್ತರ ಸಿಗಲಿಲ್ಲ. ಆಗ ಉತ್ತರ ಹೇಳಲು ಟಾ_ರಸನಿಗೆ ಅನುಮತಿ ದೊರೆಯಿತು.

ಟಾ_ರಸ ಹೇಳಿದ: `ನಾವು ಭೂತ, ವರ್ತಮಾನ, ಭವಿಷ್ಯಗಳಲ್ಲಿ ಊಟ ಮಾಡುವುದಿಲ್ಲ. ನಾವು ಊಟ ಮಾಡುವುದು ಬಾಯಿಯಲ್ಲಿ’

Post

ಸಹನೆಯನ್ನು ಪಾಲಿಸುವುದೆಂದರೆ….

In ಟಾ_ರಸನ ಕಥೆಗಳು on October 3, 2006 by ಶೂನ್ಯ ಸಂಪಾದಕ

ಆಲ್‌_ಹಾಲ್‌ ಅವರ ಆಶ್ರಮದಲ್ಲಿ ನಡೆದ ಘಟನೆ ಇದು. ಒಬ್ಬ ಪಶ್ಚಿಮ ನಾಡಿನ ವಿದ್ಯಾರ್ಥಿ ಬಂದು ಸೇರಿಕೊಂಡ. ಗುರುಗಳ ಬೋಧನೆಯನ್ನೆಲ್ಲಾ ಅಕ್ಷರಾರ್ಥದಲ್ಲಿ ಪಾಲಿಸುತ್ತಿದ್ದ ಈತ ಒಂದು ದಿನ ಭಿಕ್ಷೆಗೆ ಹೋಗಿದ್ದಾಗ ಯಾರೋ ಒಬ್ಬಾತ ಆಕ್ರಮಣ ನಡೆಸಿ ಭಿಕ್ಷಾ ಪಾತ್ರೆ ಕಿತ್ತುಕೊಳ್ಳಲು ಪ್ರಯತ್ನಿಸಿದ. ಆಲ್‌_ಹಾಲ್‌ ಅವರ ಶಿಷ್ಯನಾಗಿ ತಾನು ಹೇಗೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸಿದ ಈತನಿಗೆ ನೆನಪಾಗಿದ್ದು `ಎಲ್ಲರೊಂದಿಗೂ ಸಹನೆಯಿಂದ ವರ್ತಿಸು’ ಎಂಬ ಗುರುವಚನ.

ದಾಳಿ ನಡೆಸಿ ಭಿಕ್ಷಾಪಾತ್ರೆಯನ್ನು ಕಿತ್ತೊಯ್ದರೂ ಸಹನೆಯಿಂದಿದ್ದ ಈತ ಆಶ್ರಮಕ್ಕೆ ಹಿಂದಿರುಗಿ ಗುರುಗಳಿಗೆ ಘಟನೆಯನ್ನು ವಿವರಿಸಿದ. ಆ ಹೊತ್ತಿನಲ್ಲಿ ಅಲ್ಲಿಯೇ ಇದ್ದ ಟಾ_ರಸ ಗಹಗಹಿಸಿ ನಕ್ಕ. ಗುರುಗಳೂ ನಗುವಿಗೆ ಜತೆಯಾದರು.

ಇವರಿಬ್ಬರೂ ಯಾಕೆ ನಕ್ಕರು ಎಂದು ಅರ್ಥವಾಗದೆ ತಲೆಕೆಡಿಸಿಕೊಂಡ ಆತ ಕೊನೆಗೆ ಟಾ_ರಸನನ್ನು ಭೇಟಿಯಾಗಿ `ನಾನು ಸಹನೆಯಿಂದ ವರ್ತಿಸುವ ಬೇರೆ ಮಾರ್ಗವಿತ್ತೇ?’ ಎಂದು ಪ್ರಶ್ನಿಸಿದ.

ಇದಕ್ಕೆ ಉತ್ತರಿಸಿದ ಟಾ_ರಸ `ಖಂಡಿತವಾಗಿಯೂ ಇತ್ತು. ನೀನು ಬಹಳ ಸಹನೆಯಿಂದ ನಿನ್ನ ಎಡಗೈಯಲ್ಲಿದ್ದ ಊರುಗೋಲನ್ನು ಬಲಗೈಗೆ ವರ್ಗಾಯಿಸಿ, ಸಹನೆಯಿಂದ ನಿನ್ನ ಶಕ್ತಿಯನ್ನೆಲ್ಲಾ ಕೇಂದ್ರೀಕರಿಸಿ, ಸಹನೆಯಿಂದ ಸಾಕಷ್ಟು ವೇಗವಾಗಿ ಆ ಕೋಲನ್ನು ಎತ್ತಿ, ಸಹನೆಯಿಂದ ಅವನಿಗೊಂದು ಏಟು ಕೊಡಬಹುದಿತ್ತು!’