ಟಾ_ರಸ ನಾಡಿಶಾಸ್ತ್ರ, ಮರ್ಮಶಾಸ್ತ್ರಗಳನ್ನು ಅಭ್ಯಾಸ ಮಾಡುತ್ತಿದ್ದ ದಿನಗಳವು. ಒಂದು ದಿನ ಮಧ್ಯಾಹ್ನ ಬೀಡಾಡಿ ದನವೊಂದು ಗುರುಕುಲಕ್ಕೆ ಸೇರಿದ ಹೊಲಕ್ಕೆ ನುಗ್ಗಿ ಪೈರನ್ನು ಕಬಳಿಸುತ್ತಿತ್ತು. ಇದನ್ನು ಕಂಡ ಗುರು ಆಲ್_ಹಾಲ್ರ ಪತ್ನಿ ಟಾ_ರಸನನ್ನು ಕೂಗಿ ಕರೆದು ದನವನ್ನು ಓಡಿಸಲು ಹೇಳಿದರು. ಟಾ_ರಸ ಸಣ್ಣದೊಂದು ಕಡ್ಡಿ ತೆಗೆದುಕೊಂಡು ದನವನ್ನು ಓಡಿಸಲು ಪ್ರಯತ್ನಿಸಿದ. ಅದು ಟಾ_ರಸನ ಪೆಟ್ಟುಗಳಿಗೆ ಯಾವ ಗೌರವವನ್ನೂ ಕೊಡದೇ ಪೈರು ತಿನ್ನುವ ತನ್ನ ಕಾಯಕವನ್ನು ಮುಂದುವರಿಸಿತು. ಟಾ_ರಸ ಸಣ್ಣ ಕಡ್ಡಿ ಬಳಸಿ ಎಚ್ಚರಿಕೆಯಿಂದ ಮೆಲ್ಲನೆ ಆ ದನವನ್ನು ತಟ್ಟಿ ಓಡಿಸುವ ಪ್ರಯತ್ನವನ್ನೂ ಮುಂದುವರಿಸಿದ.
ಇದನ್ನು ಮನೆಯೊಳಗಿನಿಂದಲೇ ನೋಡುತ್ತಿದ್ದ ಟಾ_ರಸನ ಗುರು ಪತ್ನಿಗೆ ಕೋಪ ತಡೆಯಲಾಗಲಿಲ್ಲ. ತಾವೇ ಒಂದು ದೊಡ್ಡ ದೊಣ್ಣೆಯೊಂದಿಗೆ ಬಂದು ದನಕ್ಕೆ ಎರಡು ಪೆಟ್ಟು ಕೊಟ್ಟು ಓಡಿಸಿದರು. ನಂತರ ಟಾ_ರಸನನ್ನು ಉದ್ದೇಶಿಸಿ `ಈ ಕಡ್ಡಿಯಿಂದ ತಟ್ಟಿದರೆ ಅದು ಹೋಗಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
ಟಾ_ರಸ ಸ್ವಲ್ಪ ಕೋಪದಿಂದಲೇ ಉತ್ತರಿಸಿದ ` ನೀವು ಮರ್ಮಶಾಸ್ತ್ರ ಕಲಿತಿದ್ದರೆ ನನ್ನ ಕಷ್ಟ ತಿಳಿಯುತ್ತಿತ್ತು. ನನಗೆ ಆ ದನದ ದೇಹದ ತುಂಬ ಮರ್ಮಗಳೂ ನಾಡಿಗಳೂ ಕಾಣಿಸುತ್ತಿದ್ದವು. ನನ್ನ ಪೆಟ್ಟು ಅವುಗಳಲ್ಲಿ ಒಂದಕ್ಕೆ ತಾಗಿದ್ದರೂ ಆ ದನ ಸಾಯುತ್ತಿತ್ತು’