Archive for January, 2007

Post

ತುಂಬಿದ ಬುರುಡೆ

In ಆಲ್_ಹಾಲ್ ನ ಕಥೆಗಳು on January 30, 2007 by ಶೂನ್ಯ ಸಂಪಾದಕ

ಗುರು ಆಲ್‌_ಹಾಲ್‌ರ ಬಳಿ ಉಪದೇಶ ಮತ್ತು ಶಿಷ್ಯತ್ವ ಯಾಚಿಸಿ ಬರುವವರ ಸಂಖ್ಯೆ ಬಹಳ ದೊಡ್ಡದಿತ್ತು. ಈ ಸಂಖ್ಯೆಯಿಂದ ಅವರೇನೂ ವಿಚಲಿತರಾಗಿರಲಿಲ್ಲ. ನಿಜವಾದ ವಿದ್ಯಾರ್ಥಿಯನ್ನು ಆರಿಸುವ ಕಲೆ ಅವರಿಗೆ ಗೊತ್ತಿತ್ತು. ಅವರ ಆಯ್ಕೆಯ ವಿಧಾನಕ್ಕೆ ಸಂಬಂಧಿಸಿದ ಒಂದು ಕತೆ ಇಲ್ಲಿದೆ.

ಒಮ್ಮೆ ದೂರ ದೇಶದಿಂದ ಒಬ್ಬ ವಿದ್ವಾಂಸ ಆಲ್‌_ಹಾಲ್‌ ಆಶ್ರಮಕ್ಕೆ ಬಂದ. ಆತನ ಉದ್ದೇಶ ಸರಳವಾಗಿತ್ತು. ಆಲ್‌_ಹಾಲ್‌ ಅವರ ಶಿಷ್ಯ ವೃತ್ತಿ ಮಾಡಿ `ಟೌತ್ವ’ ಗಳಿಸುವುದು. ಆಲ್‌_ಹಾಲ್‌ರ ಬಗ್ಗೆ ಮೊದಲೇ ಅಧ್ಯಯನ ನಡೆಸಿ ಪರೀಕ್ಷೆಗೆ ಸಿದ್ಧನಾಗಿದ್ದ.

ಆಲ್‌_ಹಾಲ್‌ ಈತನನ್ನು ಕರೆದು ಕುಶಲ ಮಾತನಾಡಿ ಪೂರ್ವಾಪರ ವಿಚಾರಿಸಿದರು. ಆತ ತನ್ನ ಬಗ್ಗೆ ಹೇಳಿಕೊಳ್ಳಲು ಆರಂಭಿಸಿದ. ಈ ಹೊತ್ತಿಗೆ ಸರಿಯಾಗಿ ಆಲ್‌_ಹಾಲ್‌ರ ಶಿಷ್ಯ ಹೆಂಡದ ಎರಡು ಹೆಂಡದ ಬುರುಡೆಗಳನ್ನೂ ತಂದಿಟ್ಟ.

ಆಲ್‌_ಹಾಲ್‌ ತಮ್ಮ ಹೆಂಡದ ಬುರುಡೆಯಿಂದ ವಿದ್ವಾಂಸನ ಎದುರಿದ್ದ ತುಂಬಿದ ಹೆಂಡದ ಬುರುಡೆಗೆ ಹೆಂಡ ಸುರಿಯ ತೊಡಗಿದರು. ಅದು ಚೆಲ್ಲಿ ಹೊರಗೆ ಹರಿವಾಗ ಆತ ಕೇಳಿದ `ಇದೇನು ಗುರುಗಳೇ?’

`ಏನಿಲ್ಲಾ ನನ್ನ ಬಳಿ ನೀನು ಕಲಿಯಲು ಬಂದಿರುವುದೂ ಇದೇ ಅವಸ್ಥೆಯಲ್ಲಿ’ ಎಂದು ಆಲ್‌_ಹಾಲ್‌ ಉತ್ತರಿಸಿದರು.

Post

ನೆನಪಿಡುವ ಯಂತ್ರ

In ಆಲ್_ಹಾಲ್ ನ ಕಥೆಗಳು on January 28, 2007 by ಶೂನ್ಯ ಸಂಪಾದಕ

ಗುರು ಆಲ್‌_ಹಾಲ್‌ ಅವರ ಆಶ್ರಮಕ್ಕೆ ಪಶ್ಚಿಮದ ಸಾಧಕನೊಬ್ಬನ ಆಗಮನವಾಯಿತು. ಇವನು ಈವರೆಗೂ ಬಂದಿದ್ದ ಪಶ್ಚಿಮದ ಸಾಧಕರೆಲ್ಲರಿಗಿಂತ ಭಿನ್ನನಾಗಿದ್ದ. ತನ್ನ ಸಾಧನೆಗಳ ಬಗ್ಗೆ ಆತ ಏನನ್ನೂ ಹೇಳಲಿಲ್ಲ. ಬದಲಿಗೆ ಆ ಸಾಧನೆಗಳು ಅಷ್ಟೇನೂ ಮುಖ್ಯವಲ್ಲ. ಅದಕ್ಕಾಗಿಯೇ ನಾನು ಆಲ್‌_ಹಾಲ್‌ ಅವರ ಮಾರ್ಗದರ್ಶನದಲ್ಲಿ ಕಲಿಯಲು ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ.

ಬಂದ ದಿನ ಅವನಿಗೆ ಗುರುಗಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮರು ದಿನ ಸಂಜೆಯ ಧ್ಯಾನದ ವೇಳೆ ಗುರುಗಳು ಅವನನ್ನು ಬರಲು ಹೇಳಿಕಳುಹಿಸಿದರು. ಆತ ಗುರುಗಳೆದುರು ನಿಂತು ತಾನು ವಿದ್ಯಾರ್ಥಿಯಾಗಿ ಬಂದಿದ್ದೇನೆ ಎಂದು ಪರಿಚಯಿಸಿಕೊಂಡ. ಗುರು ಆಲ್‌_ಹಾಲ್‌ `ನಿನ್ನ ಈವರೆಗಿನ ಕಲಿಕೆಯ ಬಗ್ಗೆ ಹೇಳು’ ಎಂದರು.

ಆ ಪಶ್ಚಿಮದ ಸಾಧಕ ತಾನು ಕಲಿತ ಧರ್ಮ ಗ್ರಂಥದ ಸಾಲುಗಳನ್ನು ಪಠಿಸುತ್ತಾ ಹೋದ.

ಇದನ್ನು ಕೇಳಿದ ಆಲ್‌_ಹಾಲ್‌ ಕೋಪದಿಂದ `ಮೂರ್ಖ ನೀನು ಈವರೆಗೆ ಬರೇ ನೆನಪಿಡುವುದನ್ನು ಮಾತ್ರ ಕಲಿತದ್ದೇ?’ ಎಂದು ಪ್ರಶ್ನಿಸಿದ.

ಪಶ್ಚಿಮದ ಸಾಧಕನಿಗೆ `ಟೌತ್ವ’ದ ರಹಸ್ಯ ತಿಳಿಯಿತು.

Post

ಬುದ್ಧಿವಂತನ ಪ್ರಶ್ನೆಗಳು

In ಟಾ_ರಸನ ಕಥೆಗಳು on January 26, 2007 by ಶೂನ್ಯ ಸಂಪಾದಕ

ಬಾಲಕ ಟಾ_ರಸನ ತುಂಟಾಟಗಳ ಕುರಿತು ಅನೇಕ ಕತೆಗಳಿವೆ. ಅದರಲ್ಲೊಂದು ಇಲ್ಲಿದೆ.

ಒಂದು ಮುಂಜಾನೆ ಮನೆಗೆ ತರಕಾರಿ ತರಲು ಟಾ_ರಸ ಮಾರುಕಟ್ಟೆಗೆ ಹೊರಟಿದ್ದ. ಎದುರಿನಿಂದ ಬಂದ `ಬುದ್ಧಿವಂತ’ ಹುಡುಗನೊಬ್ಬ `ಏನೋ  ಟಾ_ರಸ, ಎಲ್ಲಿಗೆ ಹೋಗುತ್ತಿದ್ದೀಯಾ’ ಎಂದು ಕೇಳಿದ. ಟಾ_ರಸ  ಇದಕ್ಕೆ `ನನ್ನ ಕಾಲು ಎಲ್ಲಿಗೆ ಕರೆದೊಯ್ಯುತ್ತದೋ ಅಲ್ಲಿಗೆ ಹೋಗುತ್ತಿದ್ದೇನೆ’ ಎಂದ.

`ಬುದ್ಧಿವಂತ’ನಿಗೆ ಏನು ಹೇಳಬೇಕೆಂದು ಅರ್ಥವಾಗದೆ ಸುಮ್ಮನಾದ. ಅಷ್ಟಕ್ಕೇ ಬಿಡದೆ ತುಂಬಾ ಯೋಚಿಸಿ ಮುಂದಿನ ಬಾರಿ ಸಿಕ್ಕಾಗ ಟಾ_ರಸ ಹೀಗೆಯೇ ಉತ್ತರಿಸಿದರೆ `ನಿನಗೆ ಕಾಲೇ ಇರಲಿಲ್ಲವಾದರೆ ಎಲ್ಲಿಗೆ ಹೋಗುತ್ತಿದ್ದೆ ?’ ಎಂದು ಕೇಳಲು ತೀರ್ಮಾನಿಸಿದ. ಕೆಲವೇ ದಿನಗಳಲ್ಲಿ ಟಾ_ರಸ ಮೊದಲಿನಂತೆಯೇ ರಸ್ತೆಯಲ್ಲಿ ಸಿಕ್ಕ. ಆಗ `ಬುದ್ಧಿವಂತ’ ಎಲ್ಲಿಗೆ ಹೋಗುತ್ತಿದ್ದೀಯಾ ಎಂಬ ಪ್ರಶ್ನೆಯನ್ನು ಪುನರಾವರ್ತಿಸಿದ. ಈ ಬಾರಿ ಟಾ_ರಸನ ಉತ್ತರ ಹೀಗಿತ್ತು `ಗಾಳಿ ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ…!’

ಬುದ್ಧಿವಂತನಿಗೆ ತಲೆಕೆಟ್ಟು ಹೋಯಿತು. ಆ ಕ್ಷಣ ಏನೂ ಹೊಳೆಯದೆ ಸುಮ್ಮನಾದ. ಆದರೆ ಸ್ವಲ್ಪವೇ ಹೊತ್ತಿನಲ್ಲಿ  ಅವನಿಗೆ ಪರಿಹಾರ ದೊರೆಯಿತು. ಮುಂದಿನ ಬಾರಿ `ಗಾಳಿಯೇ ಇಲ್ಲದಿದ್ದರೆ ಎಲ್ಲಿಗೆ ಹೋಗುತ್ತಿದ್ದೆ ?’ ಎಂದು ಮರು ಪ್ರಶ್ನೆ ಹಾಕಲು ತೀರ್ಮಾನಿಸಿದ.

ಕೆಲವೇ ದಿನಗಳಲ್ಲಿ ಮತ್ತೆ ಟಾ_ರಸ ಹಾದಿಯಲ್ಲೇ ಸಿಕ್ಕ. ಎಂದಿನಂತೆ `ಬುದ್ಧಿವಂತ’ ಹುಡುಗ ಟಾ_ರಸನನ್ನು ಸೋಲಿಸಿಬಿಡಲು ಸಿದ್ಧನಾಗಿ `ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ.

ಟಾ_ರಸನ ಉತ್ತರ ಹೀಗಿತ್ತು: `ತರಕಾರಿ ತರಲು, ಸಂತೆಗೆ…’

Post

ಹಗಲಿನಲ್ಲಿ ನಕ್ಷತ್ರ ಎಣಿಸುವ ವಿಧಾನ

In ಟಾ_ರಸನ ಕಥೆಗಳು on January 25, 2007 by ಶೂನ್ಯ ಸಂಪಾದಕ

ಟಾ_ರಸ ಚಿಕ್ಕವನಿರುವಾಗ ನಡೆದ ಘಟನೆ ಇದು. ಒಂದು ಅಮವಾಸ್ಯೆಯ ರಾತ್ರಿ ಟಾ_ರಸ ಅಂಗಳದಲ್ಲಿ ಅಂಗಾತ ಮಲಗಿ ಏನನ್ನೋ ಎಣಿಸುತ್ತಿದ್ದ. ಇದನ್ನು ಕಂಡ ಟಾ_ರಸ ತಾಯಿ `ಏನು ಮಾಡುತ್ತಿದ್ದೀಯಾ ಮಗು?’ ಎಂದು ಕೇಳಿದಳು. ಟಾ_ರಸ  ಉತ್ತರಿಸಿದ `ನಾನು ನಕ್ಷತ್ರಗಳನ್ನು ಎಣಿಸುತ್ತಿದ್ದೇನೆ’.

ಮಗನ ಉತ್ತರ ಕೇಳಿದ ತಾಯಿಗೆ ಭಾರತ ದೇಶದ ರಾಜನೊಬ್ಬ ತನ್ನ ವಿದೂಷಕನಲ್ಲಿ ನಕ್ಷತ್ರಗಳ ಸಂಖ್ಯೆ ಎಷ್ಟು ಕೇಳಿದಾಗ ಆತ ಒಂದು ಚೀಲದ ತುಂಬ ಮರಳನ್ನು ಕೊಂಡೊಯ್ದು ಕೊಟ್ಟು ಇಲ್ಲಿರುವ ಮರಳಿನ ಕಣದಷ್ಟು ನಕ್ಷತ್ರಗಳಿವೆ ಎಂದಿದ್ದ ಕತೆ ನೆನಪಾಯಿತು. ಇದನ್ನು ಆಕೆ ಟಾ_ರಸನಿಗೂ ಹೇಳಿ ನಕ್ಷತ್ರಗಳೆಷ್ಟಿವೆ ಎಂಬುದನ್ನು ಲೆಕ್ಕಿಸುವುದು ಅಸಾಧ್ಯ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದಳು. ಈ ಕತೆ ಕೇಳುತ್ತಾ ಟಾ_ರಸನಿಗೆ ನಿದ್ರೆ ಬಂತು.

ಮರುದಿನ ಬೆಳಿಗ್ಗೆ ಟಾ_ರಸ ಸೀದಾ ನದಿಗೆ ಹೋಗಿ ಒಂದು ಚೀಲ ಮರಳು ತಂದು ಅದರ ಕಣಗಳನ್ನು ಲೆಕ್ಕ ಹಾಕತೊಡಗಿದ.

ಮಗನ ಸಾಹಸ ಕಂಡ ತಾಯಿ ಲಘುವಾಗಿ `ಏನು ಮಾಡುತ್ತಿದ್ದೀಯಾ’ ಎಂದು ಪ್ರಶ್ನಿಸಿದಳು
ಅದಕ್ಕೆ ಟಾ_ರಸ : ನನಗೀಗ ಹಗಲಿನಲ್ಲಿ ನಕ್ಷತ್ರಗಳನ್ನು ಎಣಿಸುವುದು ಹೇಗೆ ಎಂದು ತಿಳಿದಿದೆ’ ಎಂದು ಉತ್ತರಿಸಿದ.

Post

ಸೊಳ್ಳೆ ಸಂಹಾರ ಕಥನವು

In ಟಾ_ರಸನ ಕಥೆಗಳು on January 24, 2007 by ಶೂನ್ಯ ಸಂಪಾದಕ

ಟಾ_ರಸ ಒಬ್ಬ ಕ್ರೂರಿ ದರೋಡೆಕೋರನಿಗೆ ಸಾಂತ್ವನ ನೀಡಿದ ವಿಷಯ ವಿವಿಧ ರೂಪ ಪಡೆದು ಜನಜನಿತವಾಗಿತ್ತು. ಇದನ್ನು ಕೇಳಿದ ಕೆಲವು ಹಳ್ಳಿಗರು ಒಂದು ದಿನ ಬಂದು ಟಾ_ರಸನನ್ನು ಭೇಟಿಯಾಗಿ ತಮ್ಮ ಊರಿನ ಮೇಲೆ ಆಗಾಗ ದಾಳಿ ಮಾಡುವ ದರೋಡೆಕೋರರ ತಂಡವೊಂದರ ಬಗ್ಗೆ ತಿಳಿಸಿ ಅವರ ಕಾಟದಿಂದ ತಪ್ಪಿಸಬೇಕು ಎಂದು ವಿನಂತಿಸಿದರು. ಟಾ_ರಸ ಇದಕ್ಕೆ ಒಪ್ಪಿ ಆ ಹಳ್ಳಿಗೆ ಹೋದ. ಎಂದಿನಂತೆ ರಾತ್ರಿ ಅಲ್ಲಿದ್ದ ತಾಳೆ ಮರವೊಂದರ ಕೆಳಗೆ ನೊರೆಯುಕ್ಕುವ ಹೆಂಡದ ಬುರುಡೆಯೆದುರು ಟಾ_ರಸ ಧ್ಯಾನ ಮಗ್ನನಾಗಿದ್ದಾಗ ದರೋಡೆಕೋರರು ಅವನನ್ನು ಸುತ್ತುವರಿದರು. ಇದರ ಅರಿವೇ ಇಲ್ಲದಂತೆ ಟಾ_ರಸ ತನ್ನ ಊರುಗೋಲೆತ್ತಿಕೊಂಡು ಒಮ್ಮೆ ಗಾಳಿಯಲ್ಲಿ ತಿರುಗಿಸಿದ. ಹತ್ತು ಸೊಳ್ಳೆಗಳು ಸತ್ತು ಟಾ_ರಸನ ಹೆಂಡದ ಬುರುಡೆಯೆದುರು ಬಿದ್ದವು. ದರೋಡೆಕೋರರು ಮತ್ತೆ ಆ ಹಳ್ಳಿಯ ತಂಟೆಗೆ ಬರಲಿಲ್ಲ.

Post

ಗುರುವಿನ ಲಕ್ಷಣ

In ಟಾ_ರಸನ ಕಥೆಗಳು on January 23, 2007 by ಶೂನ್ಯ ಸಂಪಾದಕ

ಟಾ_ರಸ ಆಗಷ್ಟೇ ಬಂದು ಆಲ್‌_ಹಾಲ್‌ರ ಆಶ್ರಮಕ್ಕೆ ಸೇರಿದ್ದ. ಬಂದ ಕೆಲವೇ ದಿನಗಳಲ್ಲಿ ಆಶ್ರಮದ ಹಲವರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದ್ದ ಟಾ_ರಸನನ್ನು ಕರೆದ ಗುರು ಆಲ್‌_ಹಾಲ್‌ ಅವನ ಕಿವಿಯಲ್ಲಿ `ವಿಮೋಚನಾ ಮಂತ್ರ’ ಬೋಧಿಸಿ `ಇದನ್ನು ನೀನು ಯಾರಿಗೂ ಹೇಳಬಾರದು. ಹೇಳಿದರೆ ನೀನು ಬಂಧನದಲ್ಲಿ ಸಿಲುಕಿ ನಿನ್ನಿಂದ ಕೇಳಿಸಿಕೊಂಡವರು ವಿಮೋಚಿತರಾಗುತ್ತಾರೆ’ ಎಂದು ಎಚ್ಚರಿಸಿ ಕಳುಹಿಸಿದರು.

ಅಲ್ಲಿಂದ ಹೊರಟ ಟಾ_ರಸ ಆಶ್ರಮದಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನೂ ಕರೆದು ಗುಂಪುಗೂಡಿಸಿ `ವಿಮೋಚನ ಮಂತ್ರ’ವನ್ನು ಉಚ್ಚ ಸ್ವರದಲ್ಸಿ ಹೇಳಿದ. ಈಗಾಗಲೇ ಆಲ್‌_ಹಾಲ್‌ರಿಂದ ವಿಮೋಚನ ಮಂತ್ರವನ್ನು ಅರಿತಿದ್ದ ಹಿರಿಯ ವಿದ್ಯಾರ್ಥಿಗಳು  ಹೋಗಿ ಆಲ್‌_ಹಾಲ್‌ಗೆ ದೂರು ಕೊಟ್ಟರು. ಅದಕ್ಕೆ ಅವರು  `ಅವನು ಗುರುವಾಗುವುದು ಖಚಿತ’ ಎಂದು ನಕ್ಕರು.