ಟಾ_ರಸ ಪ್ರವಾಸದಲ್ಲಿದ್ದ. ಹಾದಿಯಲ್ಲಿ ಸಿಕ್ಕ ಊರಿನ ಕಟ್ಟೆಯೊಂದರ ಮೇಲೆ ಕುಳಿತು ತನ್ನ ಹೆಂಡದ ಬುರುಡೆಯನ್ನು ಎದುರಿಟ್ಟುಕೊಂಡು ಧ್ಯಾನಾಸಕ್ತನಾದ. ಊರಿಗೆ ಯಾರೋ ಯೋಗಿಗಳು ಬಂದಿದ್ದಾರೆ ಅಂದುಕೊಂಡ ಊರಿನ ಪ್ರಮುಖನೊಬ್ಬ ತಮ್ಮನ್ನು ಬಹುಕಾಲದಿಂದ ಕಾಡುತ್ತಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಕಂಡುಕೊಳ್ಳಲು ತೀರ್ಮಾನಿಸಿದ.
ಟಾ_ರಸ ಕುಳಿತಿದ್ದ ಕಟ್ಟೆಯಲ್ಲಿಗೆ ಬಂದು ಎದುರು ಕುಳಿತರು. ಟಾ_ರಸ ಕಣ್ಣು ತೆರೆದು ಒಂದು ಗುಟುಕು ಹೆಂಡವನ್ನು ಗಂಟಲೊಳಕ್ಕಿಳಿಸಿ ಧ್ಯಾನ ಸಮಾಧಿಯೊಳಕ್ಕೆ ಇಳಿಯುವ ಮುನ್ನ ಎದುರು ಕುಳಿತಿದ್ದ ವ್ಯಕ್ತಿಯ ಮುಖ ನೋಡಿ ನಕ್ಕ.
ಇದನ್ನು ಕಂಡ ಊರ ಮುಖಂಡನಿಗೆ ಉತ್ಸಾಹ ಬಂತು. ‘ಸ್ವಾಮೀ ನಾನು ಬಹುಕಾಲದಿಂದ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೆಣದ ಮೆರವಣಿಗೆಯಲ್ಲಿ ಭಾಗವಹಿಸಿದಾಗ ಚಟ್ಟದ ಹಿಂದೆ ಸಾಗುವುದು ಶ್ರೇಷ್ಠವೋ ಮುಂದೆ ಸಾಗುವುದು ಶ್ರೇಷ್ಠವೋ?’ ಎಂದು ಪ್ರಶ್ನಿಸಿದ.
ತಾನು ಉಳಿದುಕೊಳ್ಳುವ ಊರುಗಳಲ್ಲಿ ಇಂಥ ಪ್ರಶ್ನೆಗಳೊಂದಿಗೆ ಬರುವ ಜನಸಾಮಾನ್ಯರನ್ನು ಪ್ರೀತಿಯಿಂದ ಕಾಣುತ್ತಿದ್ದ ಟಾ_ರಸ ‘ಹೇಗೆ ಹೋದರೂ ಶ್ರೇಷ್ಠವೇ’. ಎಂದು ಸಾಂತ್ವನ ನೀಡಲು ಪ್ರಯತ್ನಿಸಿದ.
ಆದರೆ ಪ್ರಶ್ನೆ ಕೇಳಿದಾತನಿಗೆ ಸಮಾಧಾನವಾಗಲಿಲ್ಲ. ‘ಚಟ್ಟದ ಎಡ ಭಾಗ ಶ್ರೇಷ್ಠವೋ ಬಲ ಭಾಗ ಶ್ರೇಷ್ಠವೋ?’ ಎಂದು ಮರುಪ್ರಶ್ನೆ ಎಸೆದ.
ಈ ಹೊತ್ತಿಗಾಗಲೇ ಧ್ಯಾನ ಸಮಾಧಿಗೆ ತೆರಳಿದ್ದ ಟಾ_ರಸ ಈ ಪ್ರಶ್ನಾ ಪ್ರಹಾರದಿಂದ ಇಹಕ್ಕೆ ಹಿಂದಿರುಗಿ ತನ್ನೆದುರು ಇದ್ದ ಬುರುಡೆಯಲ್ಲಿದ್ದಷ್ಟೂ ಹೆಂಡವನ್ನು ಗಂಟಲಿಗೆ ಸುರಿದುಕೊಂಡು ಹೇಳಿದ- ‘ಎಲ್ಲಿದ್ದರೂ ಪರವಾಗಿಲ್ಲ. ಚಟ್ಟದ ಮೇಲಿರದಂತೆ ಎಚ್ಚರ ವಹಿಸುವುದು ಉತ್ತಮ’.