ಹೆಣದ ಮೆರವಣಿಗೆ

ಟಾ_ರಸ ಪ್ರವಾಸದಲ್ಲಿದ್ದ. ಹಾದಿಯಲ್ಲಿ ಸಿಕ್ಕ ಊರಿನ ಕಟ್ಟೆಯೊಂದರ ಮೇಲೆ ಕುಳಿತು ತನ್ನ ಹೆಂಡದ ಬುರುಡೆಯನ್ನು ಎದುರಿಟ್ಟುಕೊಂಡು ಧ್ಯಾನಾಸಕ್ತನಾದ. ಊರಿಗೆ ಯಾರೋ ಯೋಗಿಗಳು ಬಂದಿದ್ದಾರೆ ಅಂದುಕೊಂಡ ಊರಿನ ಪ್ರಮುಖನೊಬ್ಬ ತಮ್ಮನ್ನು ಬಹುಕಾಲದಿಂದ ಕಾಡುತ್ತಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಕಂಡುಕೊಳ್ಳಲು ತೀರ್ಮಾನಿಸಿದ.

ಟಾ_ರಸ ಕುಳಿತಿದ್ದ ಕಟ್ಟೆಯಲ್ಲಿಗೆ ಬಂದು ಎದುರು ಕುಳಿತರು. ಟಾ_ರಸ ಕಣ್ಣು ತೆರೆದು ಒಂದು ಗುಟುಕು ಹೆಂಡವನ್ನು ಗಂಟಲೊಳಕ್ಕಿಳಿಸಿ ಧ್ಯಾನ ಸಮಾಧಿಯೊಳಕ್ಕೆ ಇಳಿಯುವ ಮುನ್ನ ಎದುರು ಕುಳಿತಿದ್ದ ವ್ಯಕ್ತಿಯ ಮುಖ ನೋಡಿ ನಕ್ಕ.

ಇದನ್ನು ಕಂಡ ಊರ ಮುಖಂಡನಿಗೆ ಉತ್ಸಾಹ  ಬಂತು. ‘ಸ್ವಾಮೀ ನಾನು ಬಹುಕಾಲದಿಂದ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೆಣದ ಮೆರವಣಿಗೆಯಲ್ಲಿ ಭಾಗವಹಿಸಿದಾಗ ಚಟ್ಟದ ಹಿಂದೆ ಸಾಗುವುದು ಶ್ರೇಷ್ಠವೋ ಮುಂದೆ ಸಾಗುವುದು ಶ್ರೇಷ್ಠವೋ?’ ಎಂದು ಪ್ರಶ್ನಿಸಿದ.

ತಾನು ಉಳಿದುಕೊಳ್ಳುವ ಊರುಗಳಲ್ಲಿ ಇಂಥ ಪ್ರಶ್ನೆಗಳೊಂದಿಗೆ ಬರುವ ಜನಸಾಮಾನ್ಯರನ್ನು ಪ್ರೀತಿಯಿಂದ ಕಾಣುತ್ತಿದ್ದ ಟಾ_ರಸ ‘ಹೇಗೆ ಹೋದರೂ ಶ್ರೇಷ್ಠವೇ’. ಎಂದು ಸಾಂತ್ವನ ನೀಡಲು ಪ್ರಯತ್ನಿಸಿದ.

ಆದರೆ ಪ್ರಶ್ನೆ ಕೇಳಿದಾತನಿಗೆ ಸಮಾಧಾನವಾಗಲಿಲ್ಲ. ‘ಚಟ್ಟದ ಎಡ ಭಾಗ ಶ್ರೇಷ್ಠವೋ ಬಲ ಭಾಗ ಶ್ರೇಷ್ಠವೋ?’ ಎಂದು ಮರುಪ್ರಶ್ನೆ ಎಸೆದ.

ಈ ಹೊತ್ತಿಗಾಗಲೇ ಧ್ಯಾನ ಸಮಾಧಿಗೆ ತೆರಳಿದ್ದ ಟಾ_ರಸ ಈ ಪ್ರಶ್ನಾ ಪ್ರಹಾರದಿಂದ ಇಹಕ್ಕೆ ಹಿಂದಿರುಗಿ ತನ್ನೆದುರು ಇದ್ದ ಬುರುಡೆಯಲ್ಲಿದ್ದಷ್ಟೂ ಹೆಂಡವನ್ನು ಗಂಟಲಿಗೆ ಸುರಿದುಕೊಂಡು ಹೇಳಿದ- ‘ಎಲ್ಲಿದ್ದರೂ ಪರವಾಗಿಲ್ಲ. ಚಟ್ಟದ ಮೇಲಿರದಂತೆ ಎಚ್ಚರ ವಹಿಸುವುದು ಉತ್ತಮ’.

ನೀರಿನಲ್ಲಿ ನಡೆಯುವ ವಿದ್ಯೆ

ಟಾ_ರಸ  ಒಂದು ದಿನ ಆಲ್‌_ಹಾಲ್‌ರ ಆಶ್ರಮದ ಬದಿಯಲ್ಲಿ ಹರಿಯುತ್ತಿದ್ದ ನದಿಯ ಆಚೆ ದಡದಲ್ಲಿ ತನ್ನೊಬ್ಬ ಗೆಳೆಯನೊಂದಿಗೆ ಧ್ಯಾನಕ್ಕೆ ಕುಳಿತ. ನೊರೆಯುಕ್ಕುವ ಹೆಂಡದ ಬುರುಡೆಯೊಂದಿಗೆ ಕುಳಿತಿದ್ದಾಗ ಪಶ್ಚಿಮ ದೇಶದ ಸಾಧಕನೊಬ್ಬ ಆಲ್‌_ಹಾಲ್‌ರ ಆಶ್ರಮದ ದಾರಿ ಕೇಳಿಕೊಂಡು ಬಂದ. ನದಿಯಾಚೆ ಇದ್ದ ಆಶ್ರಮವನ್ನು ತೋರಿಸಿ ಈ ಗೆಳೆಯರು ಮತ್ತೆ ಧ್ಯಾನಮಗ್ನರಾದರು.

ನದಿಯ ಅಗಲ ನೋಡಿ ಆ ಸಾಧಕ ಅಲ್ಲೇ ಕುಳಿತ. ಈ ಹೊತ್ತಿಗೆ ಏನೋ ನೆನಪಾದವನಂತೆ ಮೇಲೆದ್ದ ಟಾ_ರಸನ ಗೆಳೆಯ ನೀರಿನ ಮೇಲೆ ನಡೆಯುತ್ತ ಆಶ್ರಮದವರೆಗೆ ಹೋಗಿ ಒಂದು ಬುರುಡೆ ಹೆಂಡ ತಂದು ಆ ಸಾಧಕನ ಎದುರು ಇಟ್ಟ..

ಸಾಧಕ ಹೆಂಡ ಸೇವನೆ ಆರಂಭಿಸಿದಾಗ ಅವನಿಗೆ ತಿನ್ನಲು ಏನೂ ಇಲ್ಲ ಎಂದು ಟಾ_ರಸನಿಗೆ ನೆನಪಾಯಿತು.

ಅವನೂ ನೀರಿನ ಮೇಲೆ ನಡೆದು ಹೋಗಿ ಒಂದಷ್ಟು ಆಹಾರ ತಂದ. ಇವರಿಬ್ಬರೂ ನೀರಿನ ಮೇಲೆ ನಡೆಯುವುದನ್ನು ಕಂಡ ಆ ಪಶ್ಚಿಮದ ಸಾಧಕ ತನ್ನ ಸಾಧನೆ ತೋರಿಸಲು ನೀರಿನ ಮೇಲೆ ನಡೆಯಲು ಹೊರಟ. ನೀರಿನ ಮೇಲೆ ಕಾಲಿಟ್ಟ ತಕ್ಷಣ ಆತ  ಮುಳುಗುತ್ತಿದ್ದ. ಮತ್ತೆ ಎದ್ದು ನಿಂತು ನೀರಿನ ಮೇಲೆ ನಡೆದೇ ಬಿಡಲು ತಾನು ಕಲಿತ ಯೋಗ ವಿದ್ಯೆಯನ್ನೆಲ್ಲಾ ನೆನಪಿಸಿಕೊಂಡು ಪ್ರಯತ್ನಿಸಿದ. ವೈಫಲ್ಯದ ಪರಂಪರೆಯೇ ಮುಂದುವರಿಯಿತು.

ತಮ್ಮ ಅತಿಥಿಯ ಪಾಡನ್ನು ನೋಡುತ್ತಿದ್ದ ಟಾ_ರಸನಿಗೆ ಸಮಸ್ಯೆ ಅರ್ಥವಾಯಿತು. ತನ್ನ ಗೆಳೆಯನನ್ನು ಕರೆದು ‘ಅವನಿಗೆ ನದಿ ದಾಟಿ ಆಚೆ ಹೋಗಲಿಕ್ಕಿರಬಹುದು. ನಾವು ದಾಟಿದ ಸೇತುವೆ ನೀರು ಹರಿಯುತ್ತಿರುವುದು ಅವನಿಗೆ ಗೊತ್ತಾಗಲಿಲ್ಲ ಅನ್ನಿಸುತ್ತಿದೆ. ಅದನ್ನು ತೋರಿಸು’ ಎಂದ.

ದೇವರ ಜತೆಗಿನ ಜಗಳ

ಲೋಕ ಸಂಚಾರಕ್ಕೆಂದು ಹೊರಟಿದ್ದ ಟಾ_ರಸ ಮತ್ತು ಗುರು ಆಲ್_ಹಾಲ್ ಆ ಮರಳುಗಾಡಿನಲ್ಲಿ ಅವರಿಗೆ ಪರಿಚಿತವಾಗಿದ್ದ ಓಯಸಿಸ್ ಬಳಿಗೆ ಬಂದಾಗ ಅದೂ ಬರಡಾಗಿತ್ತು. ಅಲ್ಲಿನ ಜನರೆಲ್ಲಾ ಕಂಗಾಲಾಗಿದ್ದರು.

ಗುರು ಆಲ್_ಹಾಲ್ ರನ್ನು ಕಂಡದ್ದೇ ತಡ ಅವರಲ್ಲೊಂದು ಆಶಾವಾದ ಮೂಡಿದು. ಗುರುಗಳು ಹೇಗಾದರೂ ಮಾಡಿ ಮಳೆ ಬರಿಸಬಹುದೆಂದು ಅವರಲ್ಲಿಗೆ ಬಂದು ಮಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸಬೇಕೆಂದು ವಿನಂತಿಸಿದರು.

ಗುರು  ಆಲ್_ಹಾಲ್ ಹೇಳಿದರು ‘ನನಗೂ ದೇವರಿಗೂ ಜಗಳವಾಗಿದೆ. ಈಗ ನಾನೇನೂ ಕೇಳುವ ಸ್ಥಿತಿಯಲ್ಲಿ ಇಲ್ಲ’

ಓಯಸಿಸ್ ನ ಜನರು ಮಳೆ ಬರಿಸಲೇಬೇಕೆಂದು ಒತ್ತಾಯಿಸಿದರು. ಗುರು ಆಲ್_ಹಾಲ್  ಏನೋ ತೀರ್ಮಾನಿಸಿದವರಂತೆ ಹೆಗಲ ಮೇಲಿದ್ದ ಬಟ್ಟೆಯನ್ನು ತೆಗೆದು ಕಮಂಡಲದ ನೀರಿಗೆ ಅದ್ದಿ ಒದ್ದೆಯಾಗಿಸಿ ಹಿಂಡಿ ಹತ್ತಿರದಲ್ಲೇ ಇದ್ದ ಮುಳ್ಳುಕಂಟಿಯ ಮೇಲೆ ಒಣಗಿಸಲು ಹರಡಿದರು.

ಕೆಲವೇ ಕ್ಷಣದಲ್ಲಿ ಆಕಾಶದಲ್ಲಿ ಮೋಡಗಟ್ಟಿತು. ಜೋರಾಗಿ ಮಳೆ ಸುರಿಯಿತು.

ವಿಕಾಸವಾದ

ಗುರು ಆಲ್_ಹಾಲ್ ಅವರ ಆಶ್ರಮದಲ್ಲಿ ಒಂದು ಬೆಕ್ಕು ಇತ್ತು. ಇದರೆದುರು ಏನನ್ನು ಕುಡಿಯಲು ಇಟ್ಟರೂ ಅದು ಪಾತ್ರೆಯನ್ನು ಉರುಳಿಸಿ ಪಾತ್ರೆಯೊಳಗಿರುವುದನ್ನು ನೆಲಕ್ಕೆ ಚೆಲ್ಲಿ ಆಮೇಲೆ ಅದನ್ನು ನೆಕ್ಕುತ್ತಿತ್ತು. ಇದನ್ನು ಕಂಡ ಶಿಷ್ಯರೆಲ್ಲರೂ ಅದನ್ನೊಂದು ದಡ್ಡ ಬೆಕ್ಕು ಎಂದು ತೀರ್ಮಾನಿಸಿಬಿಟ್ಟಿದ್ದರು.

ಒಂದು ದಿನ ಆಲ್_ಹಾಲ್ ಅವರು ವಿಕಾಸವಾದದ ಬಗ್ಗೆ ಹೇಳುತ್ತ ಆಶ್ರಮದಲ್ಲಿರುವ ಬೆಕ್ಕು ವಿಕಾಸವಾದ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದುಬಿಟ್ಟರು. ಶಿಷ್ಯರೆಲ್ಲಾ ಗಾಬರಿಯಾಗಿ ಈ ಬೆಕ್ಕು ವಿಕಾಸದ ಹಾದಿಯಲ್ಲಿ ಹಿಂದಕ್ಕೆ ಚಲಿಸಿರಬೇಕು ಎಂದು ಭಾವಿಸಿ “ವಿಕಾಸ ಎಂದರೆ ಹಿಂದಕ್ಕೆ ಚಲಿಸುವುದೇ ಎಂದು ಪ್ರಶ್ನಿಸಿದರು.”

ಗುರುಗಳಿಗೆ ಶಿಷ್ಯರ ಮನದಿಂಗಿತ ಅರ್ಥವಾಗಿ “ಬೆಕ್ಕು ಹಿಂದಕ್ಕೆ ಚಲಿಸಿಲ್ಲ. ಅದು ಮುಂದಕ್ಕೇ ಚಲಿಸಿದೆ. ಈ ಬೆಕ್ಕಿನ ಪೂರ್ವಜನಾದ ಬೆಕ್ಕೊಂದು ಭಾರತ ದೇಶದ ಸಾಮ್ರಾಟನಲ್ಲಿ ಒಬ್ಬನಾದ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ವಿದೂಷಕ ತೆನಾಲಿ ರಾಮನ ಮನೆಯಲ್ಲಿದ್ದ. ಅಲ್ಲಿ ಒಮ್ಮೆ ಬಿಸಿ ಹಾಲು ಕುಡಿದು ಗಂಟಲು ಸುಟ್ಟುಕೊಂಡ ಮೇಲೆ ಅವನ ಮುಂದಿನ ತಲೆಮಾರು ಗಂಟಲು ಸುಟ್ಟುಕೊಳ್ಳಗೇ ದ್ರವಾಹಾರವನ್ನು ತೆಗೆದುಕೊಳ್ಳುವ ವಿಧಾನವನ್ನು ಆವಿಷ್ಕರಿಸಿತು.” ಎಂದರು.

ನರಕವಾಸಿಯ ಭಯ

ಟಾ_ರಸ ಧ್ಯಾನಸ್ಥನಾದಾಗ ದೇವರ ಜತೆ ಸಂಭಾಷಿಸುತ್ತಿರುತ್ತಾನೆ ಎಂಬುದು ಜನಪ್ರಿಯ ನಂಬಿಕೆ. ಕೆಲವರು ಹೇಳುವಂತೆ ಅವನು ಸ್ವರ್ಗ-ನರಕಗಳ ದರ್ಶನವನ್ನೂ ಮಾಡಿಕೊಂಡು ಹಿಂದಿರುಗುತ್ತಿದ್ದನಂತೆ.  ಈ ಕಾರಣದಿಂದಾಗಿಯೇ ಧ್ಯಾನದಿಂದ ಎದ್ದ ತಕ್ಷಣ ಅವನಾಡುವ ಮಾತು ಈ ಲೋಕದ್ದಲ್ಲ ಎಂಬಂತೆ ಇರುತ್ತವೆ ಎಂದು ಕೆಲವರು ಹೇಳುತ್ತಾರೆ.

ಟಾ_ರಸ ಒಂದು ದಿನ ಎಂದಿನಂತೆ ಈಚಲ ಮರದ ಕೆಳಗೆ  ಕುಳಿತಿದ್ದಾಗ ಒಬ್ಬಾತ ಬಂದು ಸ್ವರ್ಗ-ನರಕಗಳ ಕುರಿತು ಮಾತನಾಡಲು ತೊಡಗಿದ. ಟಾ_ರಸ `ಒಂದು ನಿಮಿಷ’ ಎಂದು ಹೇಳಿ ಸಮಾಧಿಗೆ ತೆರಳಿದ. ಒಂದೆರಡು ನಿಮಿಷಗಳ ನಂತರ ಕಣ್ಣು ತೆರೆದಾಗ ಎದುರಿದ್ದಾತ `ನರಕದ ಹಿಂಸೆಯ ಬಗೆಗಿನ ತಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದ.

ಟಾ_ರಸ ಉತ್ತರಿಸಿದ `ನಾನು ಈಗಷ್ಟೇ ನರಕದ ದರ್ಶನ ಮಾಡಿ ಬಂದೆ. ನರಕದ ಬಾಗಿಲು ತೆರೆದೇ ಇದೆ. ಆದರೆ ಯಾರೊಬ್ಬ ನರಕವಾಸಿಯೂ ಹೊರಗೆ ಬರುವ ಧೈರ್ಯ ಮಾಡುತ್ತಿಲ್ಲ!’

ಈಶಾಸಸ್ವ ಬೋಧಿಸಿದ ಜ್ಞಾನ

ಗುರು ಆಲ್‌_ಹಾಲ್‌ ಅವರ ಸಾಧನೆಯ ಬಗ್ಗೆ ಇದ್ದ ದಂತ ಕಥೆಗಳು ಅನೇಕ. ಅವರ ಬೋಧನಾ ಜ್ಞಾನವೂ ಅಷ್ಟೇ. ಇದನ್ನೆಲ್ಲಾ ಅವರು ಹೇಗೆ ಗಳಿಸಿದರು ಎಂಬುದಕ್ಕೆ ಸಂಬಂಧಿಸಿದಂತೆ ಇರುವ ಕಥೆ ಇಲ್ಲಿದೆ.

ಅದು ಗುರು ಆಲ್‌_ಹಾಲ್‌ ಜ್ಞಾನಾನ್ವೇಷಣೆಯಲ್ಲಿ ಸಂಚಾರ ನಡೆಸುತ್ತಿದ್ದ ಕಾಲಘಟ್ಟ. ಈ ಸಂಚಾರದ ವೇಳೆ ಅವರು ಭಾರತಕ್ಕೆ ಬಂದರು. ಆ ಕಾಲದಲ್ಲಿ ಭಾರತದಲ್ಲಿದ್ದ ಈಶಾಸತ್ವ ಎಂಬ ಮಹಾ ಜ್ಞಾನಿಯೊಬ್ಬಳ ಬಳಿಗೆ ಆಲ್‌_ಹಾಲ್‌ ಮಾರ್ಗದರ್ಶನ ಪಡೆಯಲು ಹೋದರು.

ಆಲ್‌_ಹಾಲ್‌ ಹೋದಾಗ ಈಶಾಸತ್ವ ಈಚಲ ಮರದ ಕೆಳಗೆ ಕುಳಿತು ಹರಟೆ ಹೊಡೆಯುತ್ತಿದ್ದಳು. ಆಲ್‌_ಹಾಲ್‌ರನ್ನು ನೋಡಿದ ಆಕೆ `ಕೇಳು’ ಎಂದಳು.

ಆಲ್‌_ಹಾಲ್‌ ಪ್ರಶ್ನಿಸಿದರು. `ಶಬ್ದಗಳನ್ನು ಬಳಸದೆ, ಶಬ್ದವನ್ನು ಬಳಸದೆಯೂ ಇರದೆ ಸತ್ಯವನ್ನು ಹೇಳುವುದು ಹೇಗೆ?’
ಈಶಾಸತ್ವ ಮೌನವಾಗಿದ್ದಳು.

ಆಲ್‌_ಹಾಲ್‌ `ಮಹಾತಾಯಿ ನೀನು ನೀಡಿದ ಅರಿವಿಗೆ ನಾನು ಕೃತಜ್ಞ’ ಎಂದು ಸಾಷ್ಟಾಂಗ ವಂದಿಸಿ ಅಲ್ಲಿಂದ ಹೊರಟರು.

ಕತೆಯನ್ನು ಅರ್ಥ ಮಾಡಿಕೊಳ್ಳದ ಯಾರೋ ಟಾ_ರಸನಲ್ಲಿ  ಅರ್ಥವಿವರಿಸಬೇಕು ಎಂದಾಗ ಆತನೂ ಮೌನವಾಗಿದ್ದನಂತೆ.

ತುಂಬಿದ ಬುರುಡೆ

ಗುರು ಆಲ್‌_ಹಾಲ್‌ರ ಬಳಿ ಉಪದೇಶ ಮತ್ತು ಶಿಷ್ಯತ್ವ ಯಾಚಿಸಿ ಬರುವವರ ಸಂಖ್ಯೆ ಬಹಳ ದೊಡ್ಡದಿತ್ತು. ಈ ಸಂಖ್ಯೆಯಿಂದ ಅವರೇನೂ ವಿಚಲಿತರಾಗಿರಲಿಲ್ಲ. ನಿಜವಾದ ವಿದ್ಯಾರ್ಥಿಯನ್ನು ಆರಿಸುವ ಕಲೆ ಅವರಿಗೆ ಗೊತ್ತಿತ್ತು. ಅವರ ಆಯ್ಕೆಯ ವಿಧಾನಕ್ಕೆ ಸಂಬಂಧಿಸಿದ ಒಂದು ಕತೆ ಇಲ್ಲಿದೆ.

ಒಮ್ಮೆ ದೂರ ದೇಶದಿಂದ ಒಬ್ಬ ವಿದ್ವಾಂಸ ಆಲ್‌_ಹಾಲ್‌ ಆಶ್ರಮಕ್ಕೆ ಬಂದ. ಆತನ ಉದ್ದೇಶ ಸರಳವಾಗಿತ್ತು. ಆಲ್‌_ಹಾಲ್‌ ಅವರ ಶಿಷ್ಯ ವೃತ್ತಿ ಮಾಡಿ `ಟೌತ್ವ’ ಗಳಿಸುವುದು. ಆಲ್‌_ಹಾಲ್‌ರ ಬಗ್ಗೆ ಮೊದಲೇ ಅಧ್ಯಯನ ನಡೆಸಿ ಪರೀಕ್ಷೆಗೆ ಸಿದ್ಧನಾಗಿದ್ದ.

ಆಲ್‌_ಹಾಲ್‌ ಈತನನ್ನು ಕರೆದು ಕುಶಲ ಮಾತನಾಡಿ ಪೂರ್ವಾಪರ ವಿಚಾರಿಸಿದರು. ಆತ ತನ್ನ ಬಗ್ಗೆ ಹೇಳಿಕೊಳ್ಳಲು ಆರಂಭಿಸಿದ. ಈ ಹೊತ್ತಿಗೆ ಸರಿಯಾಗಿ ಆಲ್‌_ಹಾಲ್‌ರ ಶಿಷ್ಯ ಹೆಂಡದ ಎರಡು ಹೆಂಡದ ಬುರುಡೆಗಳನ್ನೂ ತಂದಿಟ್ಟ.

ಆಲ್‌_ಹಾಲ್‌ ತಮ್ಮ ಹೆಂಡದ ಬುರುಡೆಯಿಂದ ವಿದ್ವಾಂಸನ ಎದುರಿದ್ದ ತುಂಬಿದ ಹೆಂಡದ ಬುರುಡೆಗೆ ಹೆಂಡ ಸುರಿಯ ತೊಡಗಿದರು. ಅದು ಚೆಲ್ಲಿ ಹೊರಗೆ ಹರಿವಾಗ ಆತ ಕೇಳಿದ `ಇದೇನು ಗುರುಗಳೇ?’

`ಏನಿಲ್ಲಾ ನನ್ನ ಬಳಿ ನೀನು ಕಲಿಯಲು ಬಂದಿರುವುದೂ ಇದೇ ಅವಸ್ಥೆಯಲ್ಲಿ’ ಎಂದು ಆಲ್‌_ಹಾಲ್‌ ಉತ್ತರಿಸಿದರು.

ನೆನಪಿಡುವ ಯಂತ್ರ

ಗುರು ಆಲ್‌_ಹಾಲ್‌ ಅವರ ಆಶ್ರಮಕ್ಕೆ ಪಶ್ಚಿಮದ ಸಾಧಕನೊಬ್ಬನ ಆಗಮನವಾಯಿತು. ಇವನು ಈವರೆಗೂ ಬಂದಿದ್ದ ಪಶ್ಚಿಮದ ಸಾಧಕರೆಲ್ಲರಿಗಿಂತ ಭಿನ್ನನಾಗಿದ್ದ. ತನ್ನ ಸಾಧನೆಗಳ ಬಗ್ಗೆ ಆತ ಏನನ್ನೂ ಹೇಳಲಿಲ್ಲ. ಬದಲಿಗೆ ಆ ಸಾಧನೆಗಳು ಅಷ್ಟೇನೂ ಮುಖ್ಯವಲ್ಲ. ಅದಕ್ಕಾಗಿಯೇ ನಾನು ಆಲ್‌_ಹಾಲ್‌ ಅವರ ಮಾರ್ಗದರ್ಶನದಲ್ಲಿ ಕಲಿಯಲು ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ.

ಬಂದ ದಿನ ಅವನಿಗೆ ಗುರುಗಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮರು ದಿನ ಸಂಜೆಯ ಧ್ಯಾನದ ವೇಳೆ ಗುರುಗಳು ಅವನನ್ನು ಬರಲು ಹೇಳಿಕಳುಹಿಸಿದರು. ಆತ ಗುರುಗಳೆದುರು ನಿಂತು ತಾನು ವಿದ್ಯಾರ್ಥಿಯಾಗಿ ಬಂದಿದ್ದೇನೆ ಎಂದು ಪರಿಚಯಿಸಿಕೊಂಡ. ಗುರು ಆಲ್‌_ಹಾಲ್‌ `ನಿನ್ನ ಈವರೆಗಿನ ಕಲಿಕೆಯ ಬಗ್ಗೆ ಹೇಳು’ ಎಂದರು.

ಆ ಪಶ್ಚಿಮದ ಸಾಧಕ ತಾನು ಕಲಿತ ಧರ್ಮ ಗ್ರಂಥದ ಸಾಲುಗಳನ್ನು ಪಠಿಸುತ್ತಾ ಹೋದ.

ಇದನ್ನು ಕೇಳಿದ ಆಲ್‌_ಹಾಲ್‌ ಕೋಪದಿಂದ `ಮೂರ್ಖ ನೀನು ಈವರೆಗೆ ಬರೇ ನೆನಪಿಡುವುದನ್ನು ಮಾತ್ರ ಕಲಿತದ್ದೇ?’ ಎಂದು ಪ್ರಶ್ನಿಸಿದ.

ಪಶ್ಚಿಮದ ಸಾಧಕನಿಗೆ `ಟೌತ್ವ’ದ ರಹಸ್ಯ ತಿಳಿಯಿತು.

ಬುದ್ಧಿವಂತನ ಪ್ರಶ್ನೆಗಳು

ಬಾಲಕ ಟಾ_ರಸನ ತುಂಟಾಟಗಳ ಕುರಿತು ಅನೇಕ ಕತೆಗಳಿವೆ. ಅದರಲ್ಲೊಂದು ಇಲ್ಲಿದೆ.

ಒಂದು ಮುಂಜಾನೆ ಮನೆಗೆ ತರಕಾರಿ ತರಲು ಟಾ_ರಸ ಮಾರುಕಟ್ಟೆಗೆ ಹೊರಟಿದ್ದ. ಎದುರಿನಿಂದ ಬಂದ `ಬುದ್ಧಿವಂತ’ ಹುಡುಗನೊಬ್ಬ `ಏನೋ  ಟಾ_ರಸ, ಎಲ್ಲಿಗೆ ಹೋಗುತ್ತಿದ್ದೀಯಾ’ ಎಂದು ಕೇಳಿದ. ಟಾ_ರಸ  ಇದಕ್ಕೆ `ನನ್ನ ಕಾಲು ಎಲ್ಲಿಗೆ ಕರೆದೊಯ್ಯುತ್ತದೋ ಅಲ್ಲಿಗೆ ಹೋಗುತ್ತಿದ್ದೇನೆ’ ಎಂದ.

`ಬುದ್ಧಿವಂತ’ನಿಗೆ ಏನು ಹೇಳಬೇಕೆಂದು ಅರ್ಥವಾಗದೆ ಸುಮ್ಮನಾದ. ಅಷ್ಟಕ್ಕೇ ಬಿಡದೆ ತುಂಬಾ ಯೋಚಿಸಿ ಮುಂದಿನ ಬಾರಿ ಸಿಕ್ಕಾಗ ಟಾ_ರಸ ಹೀಗೆಯೇ ಉತ್ತರಿಸಿದರೆ `ನಿನಗೆ ಕಾಲೇ ಇರಲಿಲ್ಲವಾದರೆ ಎಲ್ಲಿಗೆ ಹೋಗುತ್ತಿದ್ದೆ ?’ ಎಂದು ಕೇಳಲು ತೀರ್ಮಾನಿಸಿದ. ಕೆಲವೇ ದಿನಗಳಲ್ಲಿ ಟಾ_ರಸ ಮೊದಲಿನಂತೆಯೇ ರಸ್ತೆಯಲ್ಲಿ ಸಿಕ್ಕ. ಆಗ `ಬುದ್ಧಿವಂತ’ ಎಲ್ಲಿಗೆ ಹೋಗುತ್ತಿದ್ದೀಯಾ ಎಂಬ ಪ್ರಶ್ನೆಯನ್ನು ಪುನರಾವರ್ತಿಸಿದ. ಈ ಬಾರಿ ಟಾ_ರಸನ ಉತ್ತರ ಹೀಗಿತ್ತು `ಗಾಳಿ ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ…!’

ಬುದ್ಧಿವಂತನಿಗೆ ತಲೆಕೆಟ್ಟು ಹೋಯಿತು. ಆ ಕ್ಷಣ ಏನೂ ಹೊಳೆಯದೆ ಸುಮ್ಮನಾದ. ಆದರೆ ಸ್ವಲ್ಪವೇ ಹೊತ್ತಿನಲ್ಲಿ  ಅವನಿಗೆ ಪರಿಹಾರ ದೊರೆಯಿತು. ಮುಂದಿನ ಬಾರಿ `ಗಾಳಿಯೇ ಇಲ್ಲದಿದ್ದರೆ ಎಲ್ಲಿಗೆ ಹೋಗುತ್ತಿದ್ದೆ ?’ ಎಂದು ಮರು ಪ್ರಶ್ನೆ ಹಾಕಲು ತೀರ್ಮಾನಿಸಿದ.

ಕೆಲವೇ ದಿನಗಳಲ್ಲಿ ಮತ್ತೆ ಟಾ_ರಸ ಹಾದಿಯಲ್ಲೇ ಸಿಕ್ಕ. ಎಂದಿನಂತೆ `ಬುದ್ಧಿವಂತ’ ಹುಡುಗ ಟಾ_ರಸನನ್ನು ಸೋಲಿಸಿಬಿಡಲು ಸಿದ್ಧನಾಗಿ `ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ.

ಟಾ_ರಸನ ಉತ್ತರ ಹೀಗಿತ್ತು: `ತರಕಾರಿ ತರಲು, ಸಂತೆಗೆ…’

ಹಗಲಿನಲ್ಲಿ ನಕ್ಷತ್ರ ಎಣಿಸುವ ವಿಧಾನ

ಟಾ_ರಸ ಚಿಕ್ಕವನಿರುವಾಗ ನಡೆದ ಘಟನೆ ಇದು. ಒಂದು ಅಮವಾಸ್ಯೆಯ ರಾತ್ರಿ ಟಾ_ರಸ ಅಂಗಳದಲ್ಲಿ ಅಂಗಾತ ಮಲಗಿ ಏನನ್ನೋ ಎಣಿಸುತ್ತಿದ್ದ. ಇದನ್ನು ಕಂಡ ಟಾ_ರಸ ತಾಯಿ `ಏನು ಮಾಡುತ್ತಿದ್ದೀಯಾ ಮಗು?’ ಎಂದು ಕೇಳಿದಳು. ಟಾ_ರಸ  ಉತ್ತರಿಸಿದ `ನಾನು ನಕ್ಷತ್ರಗಳನ್ನು ಎಣಿಸುತ್ತಿದ್ದೇನೆ’.

ಮಗನ ಉತ್ತರ ಕೇಳಿದ ತಾಯಿಗೆ ಭಾರತ ದೇಶದ ರಾಜನೊಬ್ಬ ತನ್ನ ವಿದೂಷಕನಲ್ಲಿ ನಕ್ಷತ್ರಗಳ ಸಂಖ್ಯೆ ಎಷ್ಟು ಕೇಳಿದಾಗ ಆತ ಒಂದು ಚೀಲದ ತುಂಬ ಮರಳನ್ನು ಕೊಂಡೊಯ್ದು ಕೊಟ್ಟು ಇಲ್ಲಿರುವ ಮರಳಿನ ಕಣದಷ್ಟು ನಕ್ಷತ್ರಗಳಿವೆ ಎಂದಿದ್ದ ಕತೆ ನೆನಪಾಯಿತು. ಇದನ್ನು ಆಕೆ ಟಾ_ರಸನಿಗೂ ಹೇಳಿ ನಕ್ಷತ್ರಗಳೆಷ್ಟಿವೆ ಎಂಬುದನ್ನು ಲೆಕ್ಕಿಸುವುದು ಅಸಾಧ್ಯ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದಳು. ಈ ಕತೆ ಕೇಳುತ್ತಾ ಟಾ_ರಸನಿಗೆ ನಿದ್ರೆ ಬಂತು.

ಮರುದಿನ ಬೆಳಿಗ್ಗೆ ಟಾ_ರಸ ಸೀದಾ ನದಿಗೆ ಹೋಗಿ ಒಂದು ಚೀಲ ಮರಳು ತಂದು ಅದರ ಕಣಗಳನ್ನು ಲೆಕ್ಕ ಹಾಕತೊಡಗಿದ.

ಮಗನ ಸಾಹಸ ಕಂಡ ತಾಯಿ ಲಘುವಾಗಿ `ಏನು ಮಾಡುತ್ತಿದ್ದೀಯಾ’ ಎಂದು ಪ್ರಶ್ನಿಸಿದಳು
ಅದಕ್ಕೆ ಟಾ_ರಸ : ನನಗೀಗ ಹಗಲಿನಲ್ಲಿ ನಕ್ಷತ್ರಗಳನ್ನು ಎಣಿಸುವುದು ಹೇಗೆ ಎಂದು ತಿಳಿದಿದೆ’ ಎಂದು ಉತ್ತರಿಸಿದ.